Breaking News

ರಾಜ್ಯ ಬಿಜೆಪಿ ಎತ್ತಿನಹೊಳೆ ಯೋಜನೆ ಪರ. ನಳಿನ್ ರಥಯಾತ್ರೆಗೆ ತೆರೆ ಎಳೆದ ಬಿ.ಎಸ್.ವೈ.

ಕೋಲಾರ : ಕರಾವಳಿಯ ಜನರು ಜೀವನದಿ ಎಂದೇ ಕರೆಯುವ ನೇತ್ರಾವತಿ ನದಿಯನ್ನು ತಿರುಗಿಸುವ ಯೋಜನೆ ಎತ್ತಿನಹೊಳೆ ಯೋಜನೆ ಅನುಷ್ಟಾನದ ಬಗ್ಗೆ ಕರಾವಳಿಯಲ್ಲಿ ವ್ಯಾಪಕ ವಿರೋಧವಿದೆ. ಈ ಕುರಿತು ಕೆಲವು ದಿನಗಳ ಹಿಂದೆಯಷ್ಟೇ ಜಿಲ್ಲಾ ಬಿಜೆಪಿ ಸಂಸದ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ  ಪಂಚತೀರ್ಥ ಕ್ಷೇತ್ರಗಳಿಗೆ ರಥಯಾತ್ರೆಯನ್ನು ಆಯೋಜಿಸಿ, ಎತ್ತಿನಹೊಳೆ ಯೋಜನೆಯನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ನಿಲ್ಲಿಸದೇ ಹೋದರೆ ಜನವರಿ26 ರ ನಂತರ ಉಗ್ರ ಹೋರಾಟ ನಡೆಸುವ ಬಗ್ಗೆ ಹೇಳಿಕೆಗಳನ್ನು ನೀಡಿದ್ದರು. ಆದರೆ ಈ ಹೇಳಿಕೆ ಕೇವಲ ಹೇಳಿಕೆಯಾಗಿಯೇ ಉಳಿಯುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿದೆ.

ಕೋಲಾರಕ್ಕೆ ಬರ ಅಧ್ಯಯನ ಪ್ರವಾಸ ಸಂಬಂಧ ಆಗಮಿಸಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನಾವು ಎತ್ತಿನಹೊಳೆ ಯೋಜನೆ ಪರ ಎನ್ನುವ ಮೂಲಕ ಎತ್ತಿನಹೊಳೆ ಯೋಜನೆಯನ್ನು ಬಿಜೆಪಿ ಕೇವಲ ಓಟ್ ಬ್ಯಾಂಕ್ ಆಗಿ ಬಳಸಿಕೊಳ್ಳುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ರಾಜ್ಯ ಬಿಜೆಪಿ ಸರ್ಕಾರ ಎತ್ತಿನಹೊಳೆ ಯೋಜನೆಯ ಕುರಿತು ಯಾವುದೇ ಸ್ಪಷ್ಟ ನಿಲುವು ತೋರದೆ ಓಟು ಬ್ಯಾಂಕಿಗಾಗಿ ಇಬ್ಬಗೆ ನೀತಿ ಅನುಸರಿಸುತ್ತಿರುವುದು ಎಲ್ಲೆಡೆ ಟೀಕೆಗೆ ಕಾರಣವಾಗಿದೆ.

ಬರ ಅಧ್ಯಯನ ಸಂಬಂಧ ಮಂಗಳವಾರ ಕೋಲಾರಕ್ಕೆ ಆಗಮಿಸಿದ್ದ ಬಿಜೆಪಿ ರಾಜ್ಯಾದ್ಯಕ್ಷ ಯಡಿಯೂರಪ್ಪ ಮಾಧ್ಯಮಗಳೊಂದಿಗೆ ಮಾತನಾಡುತ್ತಾ "ನಾವು ಎಂದಿಗೂ ಎತ್ತಿನಹೊಳೆ ಯೋಜನೆಯ ಪರವಾಗಿದ್ದೇವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಕರಾವಳಿ ಜನರ ಮನವೊಲಿಸುವಲ್ಲಿ ವಿಫಲರಾಗಿದ್ದಾರೆ. ಎತ್ತಿನಹೊಳೆ ಯೋಜನೆಯನ್ನು ಕೈಗೆತ್ತಿಕೊಂಡಿದ್ದು ಬಿಜೆಪಿ ಆಡಳಿತಾವದಿಯಲ್ಲಿ. ಯೋಜನೆಗೆ ಮಂಜೂರಾತಿ ನೀಡಿದ್ದು ನಾನು ಮುಖ್ಯಮಂತ್ರಿಯಾಗಿದ್ದಾಗ, ಸದಾನಂದ ಗೌಡ ಮುಖ್ಯಮಂತಿಯಾಗಿದ್ದಾಗ ಯೋಜನೆಗೆ ಹಣ ಬಿಡುಗಡೆ ಮಾಡಿದ್ದರು. ಹಾಗಾಗಿ ರಾಜ್ಯ ಬಿಜೆಪಿ ಸರ್ಕಾರ ಎತ್ತಿನಹೊಳೆ ಯೋಜನೆಯ ಪರ ಇರೋದು ಸ್ಪಷ್ಟ" ಎಂದು ಪುನರುಚ್ಚರಿಸಿದರು.

"ದಕ್ಷಿಣ ಕನ್ನಡ ಜಿಲ್ಲೆಯ ಜನಪ್ರತಿನಿಧಿಗಳೊಂದಿಗೆ ಚರ್ಚಿಸಿ ಯೋಜನೆ ಬಗ್ಗೆ ಸೂಕ್ತ ಮನವರಿಕೆ ಮಾಡೋ ಪ್ರಯತ್ನ ಮಾಡುತ್ತೇವೆ. ಭೀಕರ ಬರಗಾಲದಿಂದ ಕೋಲಾರ ತತ್ತರಿಸಿ ಹೋಗಿದೆ. ಎತ್ತಿನಹೊಳೆ ಯೋಜನೆ ಪೂರ್ಣವಾದರೆ ಕೋಲಾರಕ್ಕೆ ವರಧಾನವಾಗಲಿದೆ.ದಕ್ಷಿಣ ಕನ್ನಡ ಜಿಲ್ಲೆಯ ಜನಪ್ರತಿನಿಧಿಗಳಿಗೆ ವೈಜ್ಞಾನಿಕವಾಗಿ ಯೊಜನೆಯ ಸಾಧಕ ಬಾಧಕಗಳನ್ನು ಬಗ್ಗೆ ವಿವರಿಸಿ ಯಾರಿಗೂ ತೊಂದರೆಯಾಗದಂತೆ ಯೋಜನೆ ಅನುಷ್ಠಾನಕ್ಕೆ ಪ್ರಯತ್ನ ಮಾಡಬೇಕು. ಸುಪ್ರೀಂ ಕೋರ್ಟ್ ಹಸಿರು ಪೀಠ ಯೋಜನೆಗೆ ತಡೆಯಾಜ್ಞೆ ನೀಡಿದ್ದು ರಾಜ್ಯ ಸರ್ಕಾರ ಸಮಸ್ಯೆ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿಲ್ಲ" ಎಂದಿದ್ದಾರೆ.

ಆದರೆ ರಾಜ್ಯ ಬಿಜೆಪಿ ಸರ್ಕಾರ ಎತ್ತಿನಹೊಳೆ ಯೋಜನೆಯ ಪರ ಇದೆ ಅನ್ನೋ ಬಿ.ಎಸ್.ಯಡಿಯೂರಪ್ಪರ ಹೇಳಿಕೆ ಕರಾವಳಿಯಲ್ಲಿ ವ್ಯಾಪಕ ಟೀಕೆಗೆ ಕಾರಣವಾಗಿದೆ. ಬಿಜೆಪಿ ಕಾರ್ಯಕರ್ತರು ಬಿ.ಎಸ್.ವೈ ಹೇಳಿಕೆಯನ್ನು ವಿರೋಧಿಸಿದ್ದು, ಪಕ್ಷದ ವಿರುದ್ದವೇ ಕಾರ್ಯಕರ್ತರು ತಿರುಗಿ ಬೀಳುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿದೆ.

No comments