Breaking News

ಬೆಳ್ಳಾರೆ ಎಸ್‌ಐ ಮೇಲೆ ಪಿಕಪ್ ಹರಿಸಿ ಕೊಲೆ ಯತ್ನ ನಡೆಸಿದ ಕಟುಕರು



ಕ್ಷಿಪ್ರ ಕಾರ್ಯಾಚರಣೆ ನಡೆಸಿ 6 ಕಟುಕರನ್ನು ಬಂಧಿಸಿದ ಪೊಲೀಸರು

ಮಂಗಳೂರು : ಉರ್ವಾ ಠಾಣೆಯ ಎಎಸ್‌ಐ ಐತಪ್ಪ ಅವರ ಕೊಲೆಯತ್ನ ಪ್ರಕರಣದ ತನಿಖೆ ಮುಂದುವರಿದಿರುವಂತೆಯೇ ನಿನ್ನೆರಾತ್ರಿ  ಮತ್ತೊಬ್ಬ ಪೊಲೀಸ್ ಅಧಿಕಾರಿಯ ಕೊಲೆಯತ್ನ ನಡೆದಿದೆ. ಅಕ್ರಮ ಗೋಸಾಗಾಟ ತಡೆದ ಪೊಲೀಸ್ ಅಧಿಕಾರಿಯ ಮೇಲೆ ದುಷ್ಕರ್ಮಿಗಳು ಪಿಕ್‌ಅಪ್ ಹರಿಸಿ ಕೊಲೆಗೆ ಮುಂದಾಗಿದ್ದಾರೆ. ಬೆಳ್ಳಾರೆ ಠಾಣಾ ಎಸ್‌ಐ ಎಂ.ವಿ. ಚೆಲುವಯ್ಯ ಅವರು ತಕ್ಷಣವೇ ರಸ್ತೆಯಿಂದ ಪಕ್ಕಕ್ಕೆ ನೆಗೆದಿದ್ದರಿಂದಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾರ್ಯಾಚರಣೆ ನಡೆಸಿದ ಪೊಲೀಸರು ಸುರತ್ಕಲ್-ಕುಳಾಯಿ ನಿವಾಸಿ ಇದಿನಬ್ಬ ಎಂಬವರ ಪುತ್ರ ರಝಾಕ್(೨೬) ಎಂಬಾತನನ್ನು ಬಂಧಿಸಿದ್ದಾರೆ.

ಬೆಳ್ಳಾರೆ ಠಾಣಾ ವ್ಯಾಪ್ತಿಯ ಕಾಣಿಯೂರು ಎಂಬಲ್ಲಿ ಗಸ್ತು ನಿರತರಾಗಿದ್ದ ಎಸ್‌ಐ ಅವರು ಪಿಕ್‌ಅಪ್ ವಾಹನವನ್ನು ನಿಲ್ಲಿಸುವಂತೆ ಸೂಚಿಸಿದ್ದು ಚಾಲಕ ವಾಹನ ನಿಲ್ಲಿಸದೆ ರಸ್ತೆಗಡ್ಡನಿಂತಿದ್ದ ಎಸ್‌ಐ ಮೇಲೆಯೇ ಹರಿಸಲು ಮುಂದಾಗಿದ್ದಾನೆ. ಈ ವೇಳೆ ಎಸ್‌ಐ ಅನಾಹುತವನ್ನು ಅರಿತು ರಸ್ತೆಯ ಪಕ್ಕಕ್ಕೆ ನೆಗೆದು ಪಾರಾಗಿದ್ದಾರೆ. ವಾಹನ ಅಲ್ಲಿಂದ ಮುಂದಕ್ಕೆ ಪರಾರಿಯಾಗಿದೆ. ಪಿಕ್‌ಅಪ್ ಹಿಂಭಾಗದಲ್ಲಿ ಬೆಂಗಾವಲಾಗಿ ಓಮ್ನಿಯೊಂದು ಬರುತ್ತಿದ್ದು ಅದನ್ನು ತಡೆಯಲು ಯತ್ನಿಸಿದಾಗ ಅದರಲ್ಲಿದ್ದ ರಝಾಕ್‌ನನ್ನು ವಶಕ್ಕೆ ಪಡೆಯಲಾಗಿದೆ. ಈ ವೇಳೆ ಓಮ್ನಿ ಘಟನಾಸ್ಥಳದಿಂದ ಪರಾರಿಯಾಗಿದೆ. ತಕ್ಷಣವೇ ಪೊಲೀಸರು ಎಲ್ಲೆಡೆ ನಾಕಾಬಂದಿ ನಡೆಸಿ ನಿಂತಿಕಲ್‌ನಲ್ಲಿ ಓಮ್ನಿ, ಪಿಕ್‌ಅಪ್ ವಾಹನವನ್ನು ಸ್ವಾಧೀನಪಡಿಸಿಕೊಂಡಿದ್ದಾರೆ. ಪಿಕ್‌ಅಪ್‌ನಲ್ಲಿ ೨ ಕರು ಸೇರಿದಂತೆ ೧೩ ದನ, ಹೋರಿಗಳಿದ್ದು ಅದರಲ್ಲಿ ಒಂದು ಕರು ಮೃತಪಟ್ಟಿತ್ತು. ಆರೋಪಿಗಳ ವಿರುದ್ಧ ಕೊಲೆಯತ್ನ, ಕರ್ತವ್ಯಕ್ಕೆ ಅಡ್ಡಿ ಪ್ರಕರಣ ದಾಖಲಾಗಿದೆ.

ಬಂಧಿತ ರಝಾಕ್ ನೀಡಿದ ಮಾಹಿತಿಯ ಮೇರೆಗೆ ಪಿಕ್‌ಅಪ್ ಚಾಲಕ ಸುರತ್ಕಲ್ ನಿವಾಸಿ ಮುಸ್ತಾಫಾ, ಕೃಷ್ಣಾಪುರ ನಿವಾಸಿ ಶಬೀರ್, ಮುಹಮ್ಮದ್ ಎಣ್ಮೂರು, ಫಯಾಝ್ ಎಣ್ಮೂರು, ಉಸ್ಮಾನ್ ಎಣ್ಮೂರು ಆರೋಪಿಗಳೆಂದು ಹೆಸರಿಸಲಾಗಿದ್ದು ಆರೋಪಿಗಳ ಪತ್ತೆಗೆ ಶೋಧಕಾರ್ಯ ಮುಂದುವರಿದಿದೆ. ಆರೋಪಿಗಳು ದನಕಳ್ಳತನಗೈದು ಸಾಗಾಟ ಮಾಡುತ್ತಿದ್ದರು ಎನ್ನಲಾಗಿದೆ.


loading...

No comments