Breaking News

ಖಾಕಿಗೆ ಖಡಕ್ ಸೂಚನೆ ನೀಡಿದ ಸಿಎಂ



ಬೆಂಗಳೂರು : ಆಯಾ ಪೊಲೀಸ್ ಠಾಣೆ ವ್ಯಾಪ್ತಿಗಳಲ್ಲಿ ಪದೇಪದೇ ಅಪರಾಧ ಕೃತ್ಯಗಳನ್ನು ಮಾಡುವ ವ್ಯಕ್ತಿಗಳ ಮೇಲೆ ಪೊಲೀಸ್ ಸಿಬ್ಬಂದಿ ಮತ್ತು ಅಧಿಕಾರಿಗಳು ನಿರಂತರವಾಗಿ ನಿಗಾ ಇಟ್ಟು ಅಪರಾಧ ಚಟುವಟಿಕೆಗಳನ್ನು ನಿಯಂತ್ರಿಸಬೇಕು. ಜತೆಗೆ ಕಾಲ ಕಾಲಕ್ಕೆ ಜನಸಂಪರ್ಕ ಸಭೆಗಳನ್ನು ನಡೆಸುವ ಮೂಲಕ ಸಾರ್ವಜನಿಕರೊಂದಿಗೆ ಉತ್ತಮ ಬಾಂಧವ್ಯ ಬೆಳೆಸಿಕೊಳ್ಳಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.  ಕೋರಮಂಗಲದಲ್ಲಿರುವ ಕೆಎಸ್‍ಆರ್‍ಪಿ ಮೈದಾನದಲ್ಲಿ ಹಮ್ಮಿಕೊಂಡಿದ್ದ ಪೊಲೀಸ್ ಧ್ವಜ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಪದಕ ವಿಜೇತ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಪದಕ ವಿತರಿಸಿ ಮಾತನಾಡಿದ ಅವರು, ಸರ್ಕಾರದಲ್ಲಿ ಪೊಲೀಸ್ ವ್ಯವಸ್ಥೆ ಮುಖ್ಯವಾದ ಅಂಗ. ಸಮಾಜ ನೆಮ್ಮದಿಯಿಂದ ಇರಬೇಕಾದರೆ ಪೊಲೀಸರು ಪ್ರಾಮಾಣಿಕ ಮತ್ತು ದಕ್ಷತೆಯಿಂದ ಕೆಲಸ ಮಾಡಬೇಕು. ಪ್ರತಿಯೊಬ್ಬ ಪೊಲೀಸರಿಗೂ ಜಾಣ್ಮೆ ಮತ್ತು ತಾಳ್ಮೆ ಅತ್ಯಗತ್ಯವಾಗಿದೆ. ತಾಳ್ಮೆ, ಜಾಣ್ಮೆ ಇದ್ದರೆ ಮಾತ್ರ ಉತ್ತಮ ಪೊಲೀಸ್ ಆಗಲು ಸಾಧ್ಯ ಎಂದರು.

ಸಮಾಜದಲ್ಲಿ ಶಾಂತಿ ಕಾಪಾಡಬೇಕಾದರೆ ಪೊಲೀಸ್ ವ್ಯವಸ್ಥೆ ಸಮರ್ಥವಾಗಿರಬೇಕು. ಸಮಾಜದಲ್ಲಿ ದುಷ್ಟರು, ಒಳ್ಳೆಯವರು ಇರುತ್ತಾರೆ. ಒಳ್ಳೆಯವರಿಗೆ ರಕ್ಷಣೆ ಸಿಗುವುದು ಸರ್ಕಾರದ ಜವಾಬ್ದಾರಿ. ಬೇರೆಯವರಿಗೆ ತೊಂದರೆ ಕೊಡುವ, ಶೋಷಣೆ ಮಾಡುವ, ಕೊಲೆ, ಕಳ್ಳತನ, ದರೋಡೆಯಂತಹ ಕೃತ್ಯಗಳನ್ನು ನಡೆಸುವವರ ಮೇಲೆ ಪೊಲೀಸ್ ಠಾಣೆಗಳಲ್ಲಿ ನಿರಂತರ ನಿಗಾ ವಹಿಸಬೇಕು. ಆ ಮೂಲಕ ಅಪರಾಧ ಕೃತ್ಯಗಳನ್ನು ಕಡಿಮೆ ಮಾಡಬೇಕು ಎಂದು ತಿಳಿಸಿದರು.
ಪ್ರತಿ ಠಾಣೆಯಲ್ಲೂ ಪದೇ ಪದೇ ಅಪರಾಧ ಮಾಡುವ ಮತ್ತು ಅಂತಹ ಮನಸ್ಥಿತಿ ಇರುವ ವ್ಯಕ್ತಿಗಳ ಮಾಹಿತಿ ಇರುತ್ತದೆ. ಪೊಲೀಸರು ಆ ಅಂತಹವರ ಮೇಲೆ ನಿಗಾ ಇಟ್ಟಿರಬೇಕು. ಅಪರಾಧ ನಡೆದಾಗ ಪತ್ತೆಹಚ್ಚಿ ಶಿಕ್ಷೆ ಕೊಡಿಸುವುದು ಒಂದು ಭಾಗ. ಅಪರಾಧ ನಡೆಯುವ ಮುನ್ನ ತಡೆಗಟ್ಟುವುದು ಬಹಳ ಮುಖ್ಯ ಎಂದು ಹೇಳಿದರು.
ಎಲ್ಲಾ ಪೊಲೀಸರು ಸರಿಯಿಲ್ಲ ಎಂದು ಹೇಳಲು ಸಾಧ್ಯವಿಲ್ಲ. ಕೆಲವು ಅಧಿಕಾರಿಗಳು ಎಷ್ಟೋ ಪ್ರಕರಣಗಳನ್ನು ಭೇದಿಸಿದ್ದಾರೆ. ಎಟಿಎಂನಲ್ಲಿ ಬ್ಯಾಂಕ್ ಉದ್ಯಮಿಯ ಮೇಳೆ ಮಾರಣಾಂತಿಕ ಹಲ್ಲೆ ನಡೆಸಿದ ಆರೋಪಿಯನ್ನು ಬಂಧಿಸಲಾಗಿದೆ. ಒಂದು ವೇಲೆ ಆರೋಪಿಯನ್ನು ಬಂಧಿಸದೇ ಇದ್ದಿದ್ದರೆ ಪೊಲೀಸರಿಗೆ ಅದರ ಕಳಂಕ ಇರುತ್ತಿತ್ತು. ಇತ್ತೀಚೆಗೆ ಭಾವ ಮತ್ತು ನಾದಿನಿ ನಡುವೆ ಪ್ರೇಮ ಪ್ರಸಂಗ ಇತ್ತು. ಅದಕ್ಕೆ ಅತ್ಯಾಚಾರದ ಕಥೆ ಕಟ್ಟಿ ದೊಡ್ಡ ಪ್ರಚಾರ ನಡೆಸಲಾಯಿತು. ಪೊಲೀಸರು ತನಿಖೆ ನಡೆಸಿ ವಾಸ್ತವವನ್ನು ಜನರ ಮುಂದಿಟ್ಟರು. ಮತ್ತೊಂದು ಪ್ರಕರಣದಲ್ಲಿ ಇನ್ನೊಬ್ಬರ ಮೇಲೆ ದ್ವೇಷ ತೀರಿಸಿಕೊಳ್ಳಲು ಅಪ್ಪ-ಮಗಳು ಸೇರಿ ಅತ್ಯಾಚಾರದ ಆರೋಪ ಮಾಡಿದರು. ಅದರಲ್ಲೂ ಚಾಣಾಕ್ಷತನದಿಂದ ಪ್ರಕರಣ ಭೇದಿಸಿದ ಪೊಲೀಸರು ಅತ್ಯಾಚಾರ ನಡೆದಿಲ್ಲ ಎಂಬುದನ್ನು ಸ್ಪಷ್ಟಪಡಿಸಿದರು. ಇಂತಹ ಘಟನೆಗಳಿಂದ ಜನರಿಗೆ ಪೊಲೀಸರ ಮೇಲಿನ ವಿಶ್ವಾಸ ಹೆಚ್ಚಾಗುತ್ತದೆ ಎಂದು ಹೇಳಿದರು.
ರೌಡಿಸಂ ನಡೆಸುವ ವ್ಯಕ್ತಿಗಳ ವಿರುದ್ಧ ಸಾಕ್ಷಿ ಹೇಳಲು ಜನರು ಹಿಂದೇಟು ಹಾಕುತ್ತಾರೆ. ಹೀಗಾಗಿ ಬಹಳಷ್ಟು ರೌಡಿಗಳಿಗೆ ಶಿಕ್ಷೆಯಾಗುವುದಿಲ್ಲ. ಪದೇ ಪದೇ ಅಪರಾಧ ಮಾಡುವವರು ಎಷ್ಟು ಪಳಗಿರುತ್ತಾರೆ ಎಂದರೆ ವಕೀಲರ ಅಗತ್ಯವಿಲ್ಲದಂತೆ ತಾವೇ ವಾದ ಮಾಡಿಕೊಳ್ಳುವಷ್ಟು ಪರಿಣಿತರಾಗಿರುತ್ತಾರೆ. ಅಂತಹವರಿಗೆ ಶಿಕ್ಷೆ ಕೊಡಿಸುವುದು ಮತ್ತು ಕಾನೂನಿನ ಭಯ ಹುಟ್ಟಿಸುವುದು ಪೊಲೀಸರ ಜವಾಬ್ದಾರಿ ಎಂದು ಮುಖ್ಯಮಂತ್ರಿ ತಿಳಿಸಿದರು.  ಗೃಹ ಸಚಿವ ಡಾ.ಜಿ.ಪರಮೇಶ್ವರ್, ಸಚಿವರ ಸಲಹೆಗಾರ ಕೆಂಪಯ್ಯ, ಸರ್ಕಾರದ ಮುಖ್ಯ ಕಾರ್ಯದರ್ಶಿ ಸುಭಾಷ್ ಚಂದ್ರ ಕುಂಠಿಆ, ಪೊಲೀಸ್ ಮಹಾನಿರ್ದೇಶಕ ಆರ್.ಕೆ.ದತ್ತ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
-ee sanje 

loading...

No comments