Breaking News

ಬಿಜೆಪಿ ಸಭೆಯಲ್ಲಿ ಭಾಗವಹಿಸಿದ್ದಕ್ಕೆ ಮುಸ್ಲಿಂ ಮುಖಂಡನಿಗೆ ಜೀವ ಬೆದರಿಕೆ !



ಉಳ್ಳಾಲ: ಮಂಗಳೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಘಟಕದ ವತಿಯಿಂದ ನಡೆಸಲಾದ ಮುಸ್ಲಿಂ ಧಾರ್ಮಿಕ ಮುಖಂಡರ ಸಭೆಯ ಬಗ್ಗೆ ಭಾರೀ ಅಪಸ್ವರ ಕೇಳಿ ಬಂದಿದ್ದು, ಸಭೆಯಲ್ಲಿ ಭಾಗವಹಿಸಿದ ಮುಸ್ಲಿಂ ಮುಖಂಡರಿಗೆ ವಿದೇಶದಿಂದ ಬೆದರಿಕೆ ಕರೆಗಳು ಬಂದಿರುವ ವಿಚಾರ ಬೆಳಕಿಗೆ ಬಂದಿದೆ.
ಬೋಳಿಯಾರು ಸಭಾಂಗಣದಲ್ಲಿ ಗುರುವಾರ ಬಿಜೆಪಿ ಮಂಗಳೂರು ವಿಧಾನಸಭಾ ಕ್ಷೇತ್ರದ ವತಿಯಿಂದ ಮುಸ್ಲಿಂ ಧಾರ್ಮಿಕ ಮುಖಂಡರುಗಳ ಸಭೆ ಆಯೋಜಿಸಲಾಗಿತ್ತು. ಈ ಸಭೆಯಲ್ಲಿ ಜಿಲ್ಲೆಯ ಹಲವು ಮುಸ್ಲಿಂ ಧಾರ್ಮಿಕ ಮುಖಂಡರು ಭಾಗವಹಿ ಸುವ ಮೂಲಕ ಸಭೆ ಸಂಚಲನ ಸೃಷ್ಟಿಸಿತ್ತು. ಬಿಜೆಪಿ ಪಕ್ಷ ಆಯೋಜಿಸಿದ್ದ ಈ ಸಭೆಯಲ್ಲಿ ೧೦೦ಕ್ಕೂ ಅಧಿಕ ಮುಸ್ಲಿಂ ಧಾರ್ಮಿಕ ಮುಖಂಡರುಗಳು ಭಾಗಿಯಾಗುವ ಮೂಲಕ ಇತಿಹಾಸ ನಿರ್ಮಿಸಿದರು. ಜಿಲ್ಲೆಯಲ್ಲಿ ಪ್ರಥಮ ವಾಗಿ ನಡೆದ ಬಿಜೆಪಿ ಸಭೆಯಲ್ಲಿ ಮುಸ್ಲಿಂ ಧಾರ್ಮಿಕ ಮುಖಂಡರ ಭಾಗಿ ಕ್ಷೇತ್ರದಲ್ಲಿ ಬಿಜೆಪಿಯ ಭವಿಷ್ಯವನ್ನು ಬದಲಾಯಿಸುವ ಸಾಧ್ಯತೆಗಳಿವೆ ಅನ್ನುವ ಅಭಿಪ್ರಾಯ ಕೂಡ ಕೇಳಿ ಬಂದಿತ್ತು.

ಇನ್ನು ಸಭೆಯನ್ನುದ್ದೇಶಿಸಿ ಮಾತನಾಡಿದ ಧಾರ್ಮಿಕ ಮುಖಂಡ ಎ.ಬಿ. ಹನೀಫ್ ನಿಝಮಿ ಎಂಬವರಿಗೆ ವಿದೇಶದಿಂದ ಮೂರು ಬೆದರಿಕೆ ಕರೆಗಳು ಬಂದಿವೆ. ಕಾರ್ಯಕ್ರಮದಲ್ಲಿ ಭಾಗವಹಿಸಿರುವುದನ್ನು ವಿರೋಧಿಸಿ ಮಾತನಾಡಿದ ಕರೆ ಮಾಡಿದವರು ಕೊಲ್ಲುವ ಬೆದರಿಕೆಯನ್ನು ಒಡ್ಡಿರುವುದಾಗಿ ತಿಳಿಸಿದ್ದಾರೆ. ಬಿಜೆಪಿ ವತಿಯಿಂದ ನಡೆದಿರುವ ಸಭೆ ವಿವಾದಕ್ಕೀಡಾಗುತ್ತಿದ್ದು, ಕೊಣಾಜೆ ಪೊಲೀಸ್ ಠಾಣೆಯಲ್ಲಿ ಈ ಕುರಿತು ದೂರು ನೀಡಲಾಗಿದೆ ಎಂದು ತಿಳಿದು ಬಂದಿದೆ

Source :online

No comments