ಸಂಪುಟದಿಂದ ಪರಮೇಶ್ವರರನ್ನು ಕೈಬಿಡಲು ಆಗ್ರಹ
ಶಿವಮೊಗ್ಗ,ಡಿ. 30: ಪ್ರಧಾನಮಂತ್ರಿ ಮೋದಿಗೆ ಅಗೌರವ ತೋರಿರುವ ಗೃಹಮಂತ್ರಿ ಜಿ. ಪರಮೇಶ್ವರ್ರನ್ನು ಸಚಿವ ಸಂಪುಟದಿಂದ ಕೈಬಿಡಬೇಕೆಂದು ಆಗ್ರಹಿಸಿ ಗೋಪಿ ವೃತ್ತದಲ್ಲಿ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ದೇಶದ ಅತ್ಯಂತ ಗೌರವ ಸ್ಥಾನ ಪ್ರಧಾನಿ ಹುದ್ದೆಗೆ ಪರಮೇಶ್ವರ್ ಅಗೌರವ ತೋರಿದ್ದಾರೆ. ಮೋದಿ ಬಗ್ಗೆ ಅವಹೇಳನಕಾರಿ ಮಾತನಾಡಿದ್ದಾರೆ. ಇದನ್ನು ಬಿಜೆಪಿ ತೀವ್ರವಾಗಿ ಖಂಡಿಸುತ್ತದೆ ಎಂದು ಪ್ರತಿಭಟನಾಕಾರರು ತಿಳಿಸಿದರು.
ರಾಜ್ಯದ ಶಾಂತಿ ಮತ್ತು ನೆಮ್ಮದಿ ಕಾಪಾಡಬೇಕಾಗಿರುವ ಗೃಹ ಸಚಿವರೇ ದೇಶದ ಉನ್ನತ ಸ್ಥಾನದಲ್ಲಿರುವ ಪ್ರಧಾನಿಯನ್ನು ಸುಟ್ಟು ಹಾಕಬೇಕೆಂಬ ಬಾಲಿಷ ಹೇಳಿಕೆಯನ್ನು ನೀಡುವುದರ ಮೂಲಕ ರಾಜ್ಯದ ಜನರಲ್ಲಿ ಅಶಾಂತಿ ಮೂಡಿಸಲು ಪ್ರಯತ್ನಿಸುತ್ತಿದ್ದಾರೆ ಹಾಗೂ ಪ್ರಧಾನಿಯವರಿಗೆ ಅಗೌರವ ಸೂಚಿಸಿದ್ದಾರೆ. ಈ ದೇಶದ ಸಂವಿಧಾನಕ್ಕೂ ಅಗೌರವ ಸೂಚಿಸಿದ್ದಾರೆ ಎಂದು ಯುವ ಮೋರ್ಚಾದ ಪದಾಧಿಕಾರಿಗಳು ತಿಳಿಸಿದರು.
ಗೃಹ ಮಂತ್ರಿ ಜಿ. ಪರಮೇಶ್ವರ್ ಅವರು ನರೇಂದ್ರ ಮೋದಿಯವರನ್ನು ಹಾಗೂ ಜನತೆಯ ಕ್ಷಮೆಯಾಚಿಸಬೇಕು ಮತ್ತು ತಕ್ಷಣವೇ ಇವರನ್ನು ಸಚಿವ ಸಂಪುಟದಿಂದ ಕೈಬಿಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.
ಪ್ರಮುಖರಾದ ವಿಕ್ರಂ, ರಾಜಾರಾಮಭಟ್, ಸಿ.ಎಚ್. ಮಾಲತೇಶ್, ದಿನೇಶ್ ನಿದಿಗೆ, ವಿಶ್ವಾಸ್, ಬಿಳಕಿ ಗಣೇಶ್, ರಾಘವೇಂದ್ರ ವಿ, ರಾಜೇಶ್ ಕಾಮತ್, ನಾಗರಾಜ್ ಟೈಲ್ಸ್, ಪ್ರದೀಪ್, ಎಸ್.ಕೆ. ರಾಘವೇಂದ್ರ ಸೇರಿದಂತೆ ಹಲವರಿದ್ದರು.
No comments