ಬೆಂಗಳೂರಿನ ಕೇಂದ್ರ ಕಾರಾಗೃಹಕ್ಕೆ ಮೂಸಂಬಿ ಹಣ್ಣು ಬಳಸಿ ಗಾಂಜಾ ಸಾಗಾಟ, ಯುವಕರಿಬ್ಬರ ಬಂಧನ.
ಬೆಂಗಳೂರು : ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಮೂಸಂಬಿ ಹಣ್ಣಿನೊಳಗೆ ಗಾಂಜಾ ಸಾಗಾಟ ಮಾಡಲು ಯತ್ನಿಸುತ್ತಿದ್ದ ಯುವಕರಿಬ್ಬರನ್ನು ಪೋಲೀಸರು ಕಾರಾಗೃಹದ ಪ್ರವೇಶದ್ವಾರದಲ್ಲಿಯೇ ಬಂಧಿಸಿದ್ದಾರೆ.
ಬೆಂಗಳೂರಿನ ಬಾಪೂಜಿ ನಗರ ನಿವಾಸಿಗಳಾದ ನವೀನ್ ಹಾಗೂ ಸಂಜಯ್ ಎಂಬವರು ಬಂಧಿತರು. ಯುವಕರಿಬ್ಬರು ಅಪರಾಧ ಪ್ರಕರಣವೊಂದರ ನಿಮಿತ್ತ ನ್ಯಾಯಾಂಗ ಬಂಧನದಲ್ಲಿರುವ ಗೆಳೆಯ ಅಶೋಕನಿಗೆ ಗಾಂಜಾ ನೀಡಲು ಜೈಲಿನ ಬಳಿ ಬಂದಿದ್ದರು.
ಕುಮಾರ್ ಎಂಬಾತನಿಂದ ಗಾಂಜಾ ಪಡೆದಿದ್ದ ಯುವಕರು ಮೂಸಂಬಿಯ ಸಿಪ್ಪಿ ಸುಲಿದು, ಹಣ್ಣಿನ ತಿರುಳು ತೆಗೆದು ಅದರೊಳಗೆ ಗಾಂಜಾ ತುಂಬಿ ಫೆವಿಕ್ವಿಕ್ ಬಳಸಿ ಸಿಪ್ಪೆಯನ್ನು ಪುನಃ ಮುಚ್ಚಿದ್ದರು. ನಂತರ ಜೈಲಿಗೆ ತೆರಳಿ ಮೂಸಂಬಿಯನ್ನು ತಮ್ಮ ಗೆಳೆಯ ಅಶೋಕನಿಗೆ ತಲುಪಿಸುವಂತೆ ಜೈಲು ಸಿಬ್ಬಂದಿಗೆ ಹೇಳಿದ್ದಾರೆ. ಆದರೆ ಮೂಸಂಬಿ ಮೇಲೆ ಫೆವಿಕ್ವಿಕ್ ಗಮ್ ಕಲೆ ನೋಡಿದ ಸಿಬ್ಬಂದಿ ಸಿಪ್ಪೆ ತೆರೆದು ನೋಡಿದಾಗ ಅದರೊಳಗೆ ಗಾಂಜಾ ಪತ್ತೆಯಾಗಿದೆ.
ತಕ್ಷಣ ಯುವಕರಿಬ್ಬರನ್ನು ಹಿಡಿದ ಸಿಬ್ಬಂದಿ ಪರಪ್ಪನ ಅಗ್ರಹಾರ ಪೋಲೀಸರಿಗೆ ಒಪ್ಪಿಸಿದ್ದಾರೆ. ಮತ್ತೊಬ್ಬ ಆರೋಪಿ ಕುಮಾರ್ ತಲೆಮರೆಸಿಕೊಂಡಿದ್ದು ಪೋಲೀಸರು ಆರೋಪಿಯ ಪತ್ತೆಗೆ ಬಲೆ ಬೀಸಿದ್ದಾರೆ.
Source - ಕನ್ನಡ ಪ್ರಭ
No comments