Breaking News

ಸೌಹಾರ್ದ ರ್ಯಾಲಿಯಲ್ಲಿ ಸಂಘಪರಿವಾರದ ವಿರುದ್ಧ ಕೇರಳ ಸಿಎಂ ವಾಗ್ಧಾಳಿ.

ಮಂಗಳೂರು: ಕೋಮುದ್ವೇಷಕ್ಕೆ ಕುಮ್ಮಕ್ಕು ನೀಡುವುದಕ್ಕೆ ಆರ್‍ಎಸ್‍ಎಸ್ ಸದಾ ಪ್ರಯತ್ನಿಸಿತ್ತು ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.

ಮಂಗಳೂರಿನ ನೆಹರೂ ಮೈದಾನದಲ್ಲಿ ಸೌಹಾರ್ದ ರ‍್ಯಾಲಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಪ್ರಧಾನಿ ಸೇರಿದಂತೆ ಹಲವಾರು ನಾಯಕರು ಆರ್‍ಎಸ್‍‌ಎಸ್ ನಡೆಯನ್ನೇ ಅನುಸರಿಸುತ್ತಾರೆ. ಭಾರತದ ಸ್ವಾತಂತ್ರ್ಯ ಹೋರಾಟ ಕಾಲದಲ್ಲಿ ಆರ್‍ಎಸ್‍ಎಸ್ ಆರಂಭವಾಗಿದ್ದರೂ, ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸದ ಸಂಘಟನೆಯಾಗಿದೆ ಆರ್‍ಎಸ್‍ಎಸ್. ಸ್ವಾತಂತ್ರ್ಯ ಹೋರಾಟದಲ್ಲಿ ಮೋಸ ಮಾಡಿದ ಇತಿಹಾಸ ಈ ಸಂಘಟನೆಯದ್ದು. ಬ್ರಿಟಿಷರು ಭಾರತದಲ್ಲಿ ಆಳ್ವಿಕೆ ಮುಂದುವರಿಸಬೇಕೆಂಬುದೇ ಈ ಸಂಘಟನೆಯ ಆಶಯವಾಗಿತ್ತು.

ದೇಶದ ಜನರಲ್ಲಿ ಭೇದಭಾವವನ್ನು ಸೃಷ್ಟಿಸುವುದು, ಧರ್ಮಗಳ ಹೆಸರಲ್ಲಿ ಜನರ ಮಧ್ಯೆ ಕಂದಕ ಉಂಟು ಮಾಡುವುದೇ ಆರ್‍ಎಸ್‍ಎಸ್‍ನ ಮುಖ್ಯ ಉದ್ದೇಶ. ಆರ್‍‌ಎಸ್‍ಎಸ್ ಎಂಬುದು ದೇಶದ ಐಕ್ಯತೆಗೆ ಮಾರಕವಾಗಿದೆ. ಅವರು ಜನರ ಮಧ್ಯೆ ಕಂದಕಗಳನ್ನು ಸದಾ ಸೃಷ್ಟಿಸುತ್ತಾ ಬಂದಿದ್ದಾರೆ.

ಮಹಾತ್ಮ ಗಾಂಧಿ ಕೊಲೆಯಾಗಿದ್ದು ಯಾಕೆ? ಗಾಂಧಿ ಯಾವತ್ತೂ ಆರ್‍ಎಸ್‍ಎಸ್‍ನವರಿಗೆ ತೊಂದರೆ ಕೊಟ್ಟಿಲ್ಲ. ಗಾಂಧಿ ಹತ್ಯೆಯಾದಾಗ ಇದೇ ಆರ್‍ಎಸ್‍ಎಸ್ ಸಿಹಿತಿಂಡಿ ಹಂಚಿತ್ತು ಎಂಬ ವಿಷಯವನ್ನು ನಾವು ಮರೆಯುವಂತಿಲ್ಲ.

ಮುಸೊಲಿನಿಯ ಫ್ಯಾಸಿಸ್ಟ್ ಸಂಘಟನೆಯ ಅದೇ ರೂಪವಾಗಿದೆ ಆರ್‍ಎಸ್‍ಎಸ್. ಆದರೆ  ಆರ್‍ಎಸ್‍ಎಸ್‍ನ ಸಿದ್ಧಾಂತ ನಾಸಿಸಂ ಆಗಿದೆ ಎಂದು ಪಿಣರಾಯಿ ಹೇಳಿದ್ದಾರೆ.

ಪಿಣರಾಯಿ ವಿಜಯನ್ ಭಾಷಣದ ಮುಖ್ಯಾಂಶಗಳು :

* ಕ್ರೈಸ್ತರು, ಮುಸ್ಲಿಂ, ಕಮ್ಯೂನಿಸ್ಟರು ನಮ್ಮ ಶತ್ರುಗಳು ಎಂಬ ನಿಲುವು ಆರ್‍ಎಸ್‍ಎಸ್‍ನದ್ದು

* ಸಾವಿರಾರು ಮಂದಿಯನ್ನು ಕೊಲೆಯಾದ ಕೋಮುಗಲಭೆಗಳಿಗೆ ನೇತೃತ್ವ ನೀಡಿದ್ದು ಇದೇ ಆರ್‍ಎಸ್‍‌ಎಸ್. ಇಂಥಾ ಕೃತ್ಯಗಳನ್ನು ಮಾಡುವುದಕ್ಕೆ ಅವರಿಗೆ ವಿಶೇಷ ತರಬೇತಿ ನೀಡಲಾಗುತ್ತದೆ.

* ಆರ್‍ಎಸ್‍ಎಸ್ ಜಾತ್ಯಾತೀತದ ವಿರೋಧಿಯಾಗಿದೆ. 1947 ಜುಲೈ 17ರಂದು ಅವರ ಮುಖವಾಣಿಯಾದ ಆರ್ಗನೈಸರ್ ನಮ್ಮ ರಾಷ್ಟ್ರಧ್ವಜದ ಬಗ್ಗೆ ಒಂದು ಲೇಖನ ಬರೆದಿತ್ತು. ರಾಷ್ಟ್ರಧ್ವಜದಲ್ಲಿ ಭಾರತದ್ದೇ ಆದ ಅಂಶಗಳು ಇಲ್ಲ ಎಂಬುದು ಆ ಲೇಖನದ ವಾದವಾಗಿತ್ತು.

* ನಮ್ಮ ದೇಶದ ಹೆಸರನ್ನು ಇಂಡಿಯಾ ಎಂದು ಕರೆದಿದ್ದಕ್ಕೂ ಆರ್‍ಎಸ್‍ಎಸ್ ವಿರೋಧ ಸೂಚಿಸಿತ್ತು. ಜುಲೈ 31ರಂದು  ಇನ್ನೊಂದು ಲೇಖನ ಪ್ರಕಟವಾಯಿತು. ಅದರಲ್ಲಿ ಇಂಡಿಯಾ ಎಂಬ ಹೆಸರಿನಿಂದ ಅಲ್ಲ ಹಿಂದೂಸ್ತಾನ್ ಎಂಬ ಹೆಸರು ಬೇಕು ಎಂಬ ವಾದವಿತ್ತು. ಭಾವೈಕ್ಯತೆ ಇರುವ ದೇಶ ಎಂಬ ನಿಲುವನ್ನು  ಆರ್‍ಎಸ್‍ಎಸ್ ಒಪ್ಪುತ್ತಿಲ್ಲ.

* ಜನಪ್ರಿಯರಾದವರನ್ನು ಕೊಲೆ ಮಾಡಲು ಸಂಘ ಪರಿವಾರ್ ಸಿದ್ಧವಾಗುತ್ತದೆ, ಕಲ್ಬುರ್ಗಿ , ಗೋವಿಂದ್ ಪನ್ಸಾರೆ, ನರೇಂದ್ರ ದಬೋಲ್ಕರ್ ಮೊದಲಾದವರು ಕೊಲೆಯಾಗಿದ್ದೇ ಹೀಗೆ.

* ಕೇರಳದಲ್ಲಿ 205 ಸಿಪಿಎಂ ಕಾರ್ಯಕರ್ತರ ಹತ್ಯೆ ನಡೆಸಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಹತ್ಯೆಗಳಾಗಿವೆ. ಉಡುಪಿಯಲ್ಲಿ ಕೂಡ ವಿನಾಯಕ ಬಾಳಿಗ, ಪ್ರತಾಪ್‌ ಪೂಜಾರಿ, ಪ್ರವೀಣ್ ಪೂಜಾರಿ ಹತ್ಯೆಯಾಗಿದ್ದು  ಸಂಘ ಪರಿವಾರದಿಂದ ಅಲ್ಲವೇ?  ಎಂದು ಪಿಣರಾಯಿ ಪ್ರಶ್ನಿಸಿದ್ದಾರೆ.

* ಕರಾವಳಿ ಸೌಹಾರ್ದ ರ‍್ಯಾಲಿಯಲ್ಲಿ ಭಾಗವಹಿಸಿದ ಪಿಣರಾಯಿ ರೈಲಿನಲ್ಲಿ ಕೇರಳಕ್ಕೆ ಹಿಂತಿರುಗಿದ್ದು, ಭದ್ರತೆ ಮತ್ತು ಮುಕ್ತವಾಗಿ ಕಾರ್ಯಕ್ರಮ ನಡೆಸಲು ಅವಕಾಶ ಕಲ್ಪಿಸಿರುವುದಕ್ಕೆ ಕರ್ನಾಟಕ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.
loading...

No comments