Breaking News

ಕೇರಳದಿಂದ ಕಾಣೆಯಾದವರು ಐಸಿಸ್‌ನಲ್ಲಿ ಸಕ್ರಿಯ: ಎನ್‌ಐಎ


ಹೊಸದಿಲ್ಲಿ: ಕೇರಳದ ಕಾಸರಗೋಡಿನಿಂದ 2015ರಲ್ಲಿ ಕಾಣೆಯಾಗಿ, ಐಸಿಸ್‌ ಸಂಘಟನೆ ಸೇರಿರುವ 14 ಮಂದಿ, ಭಾರತದಲ್ಲಿ ಇಸ್ಲಾಮಿಕ್‌ ಉಗ್ರರ ಸಿದ್ಧಾಂತಗಳನ್ನು ಪ್ರಚಾರ ಮಾಡುವಲ್ಲಿ ಸಕ್ರಿಯರಾಗಿರುವುದು ಬೆಳಕಿಗೆ ಬಂದಿದೆ.

ನಾಪತ್ತೆಯಾದ ಕೇರಳಿಗರು ಪ್ರಸ್ತುತ ಅಪಘಾನಿಸ್ತಾನದ 'ನಗರ್ಹಾರ್‌' ಪ್ರಾಂತ್ಯದಲ್ಲಿ ನೆಲೆಸಿದ್ದು, ಸಾಮಾಜಿಕ ಜಾಲತಾಣ ಸೇರಿದಂತೆ ಹಲವು ಮೂಲಗಳ ಮೂಲಕ ಭಾರತದಲ್ಲಿ ಐಸಿಸ್‌ ಸಿದ್ಧಾಂತಗಳ ಪ್ರಚಾರ ಮಾಡುತ್ತಿದ್ದಾರೆ ಎಂದು ರಾಷ್ಟ್ರೀಯ ತನಿಖಾ ತಂಡ (ಎನ್‌ಐಎ) ತನ್ನ ತನಿಖಾ ವರದಿಯಲ್ಲಿ ತಿಳಿಸಿದೆ.

ಕೇರಳದಿಂದ 14 ಮಂದಿ ನಾಪತ್ತೆಯಾದ ಬಳಿಕ 2016ರ ಜುಲೈನಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ ಪ್ರಕರಣ ದಾಖಲಿಸಿತ್ತು.

ಐಸಿಸ್‌ ಸೇರುವ ಉದ್ದೇಶದಿಂದ ಕಾಣೆಯಾದವರ ಪೈಕಿ ಕಾಸರಗೋಡಿನ ತ್ರಿಕ್ಕರಿಪುರದ ಉಡುಂಬುನ್‌ತಲ ಮೂಲದ ಅಬ್ದುಲ್‌ ರಶೀದ್‌ (30) ಪ್ರಮುಖ ಆರೋಪಿ. ಈತನ ಬಿಹಾರ ಮೂಲದ ಎರಡನೇ ಪತ್ನಿ ಯಾಸ್ಮಿನ್‌ ಮೊಹಮ್ಮದ್‌ ಜಾಹಿದ್‌ಳನ್ನು(29) ಅಫಘಾನಿಸ್ತಾನಕ್ಕೆ ವಿಮಾನ ಹತ್ತುವ ವೇಳೆ ಪೊಲೀಸರು ಬಂಧಿಸಿದ್ದರು.

ಎನ್‌ಐಎ ವರದಿ ಪ್ರಕಾರ, ಕೇರಳದಿಂದ ಜನರ ಸಾಮೂಹಿಕ ವಲಸೆಯು ರಶೀದ್‌ ಕಾರ್ಯತಂತ್ರವಾಗಿದೆ. ರಶೀದ್‌ ಮತ್ತು ಕ್ರೈಸ್ತಧರ್ಮದಿಂದ ಇಸ್ಲಾಂಗೆ ಪರಿವರ್ತನೆಗೊಂಡ ಆತನ ಮೊದಲ ಪತ್ನಿ ಸೋನಿಯಾ ಸೆಬಾಸ್ಟಿಯನ್‌ ಕೇರಳದಲ್ಲಿ ರಹಸ್ಯ ಪ್ರವಚನಗಳನ್ನು ನಿರ್ವಹಿಸಿ, ಯುವಕರನ್ನು ಇಸ್ಲಾಂನತ್ತ ಸೆಳೆಯುತ್ತಿದ್ದರು.

''ಶ್ರೀಲಂಕಾ ರಾಜಧಾನಿ ಕೊಲಂಬೋದ ಅಲ್‌-ಕುಮಾ ಅರೇಬಿಕ್‌ ಕಾಲೇಜಿನಲ್ಲಿ ರಶೀದ್‌ ಇಸ್ಲಾಮಿಕ್‌ ಅಧ್ಯಯನ ನಡೆಸುತ್ತಿದ್ದ. ಆದರೆ, ಅಧ್ಯಯನದ ವೇಳೆ ಜಿಹಾದ್‌ ಹೆಸರಲ್ಲಿ ಹಿಂಸಾಚಾರಕ್ಕೆ ಪ್ರಚೋದಿಸಿದ್ದರಿಂದ ರಶೀದ್‌ ಮತ್ತು ಆತನ ಸಹಚರನನ್ನು ಕಾಲೇಜಿನಿಂದ ಹೊರಹಾಕಲಾಗಿತ್ತು.

ಆರೋಪಿಯ ಎರಡನೇ ಪತ್ನಿ ಯಾಸ್ಮಿನ್‌, ರಶೀದ್‌ನ ಬೋಧನೆಗಳಿಂದ ಪ್ರಭಾವಿತಳಾಗಿ ಆತನನ್ನು ವರಿಸಿದ್ದಳು ಎಂದು ವರದಿಯಲ್ಲಿ ಹೇಳಲಾಗಿದೆ.

ಯಾಸ್ಮಿನ್‌ ಪಾಸ್‌ಪೋರ್ಟ್‌ ನವೀಕರಣ ಮಾಡಿಸುವಾಗ ಮತ್ತು ಆಕೆಯ ಮಗುವಿಗೆ ಪಾಸ್‌ಪೋರ್ಟ್‌ ಪಡೆಯುವಾಗ - ಈ ಎರಡೂ ಸಂದರ್ಭಗಳಲ್ಲಿ ರಶೀದ್‌ ಮತ್ತು ಯಾಸ್ಮಿನ್‌ ಜೋಡಿ, ಬಿಹಾರದ ಪಟನಾದಲ್ಲಿ ರಹಸ್ಯವಾಗಿ ತಂಗಿದ್ದರು ಎಂದು ಎನ್‌ಐಎ ತಿಳಿಸಿದೆ.
-vk

loading...

No comments