ಆಧಾರ್ ನೀಡದಿದ್ದರೆ ನಿಮ್ಮ ಮೊಬೈಲ್ ಸಂಪರ್ಕ ಕಡಿತಗೊಳ್ಳಲಿದೆ
ನವದೆಹಲಿ: ಹಾಲಿ ಪ್ರಿಪೇಯ್ಡ್ ಮತ್ತು ಪೋಸ್ಟ್ಪೇಯ್ಡ್ ಮೊಬೈಲ್ ಸಿಮ್ ಬಳಕೆದಾರರು, ಮೊಬೈಲ್ ಸೇವಾ ಕಂಪೆನಿಗಳಿಗೆ ಆಧಾರ್ ಸಂಖ್ಯೆ ಕೊಡುವುದು ಕಡ್ಡಾಯ.ಆಧಾರ್ ಸಂಖ್ಯೆ ಜೋಡಣೆಯಾಗದ ಮೊಬೈಲ್ ಸಂಪರ್ಕಗಳು 2018ರ ಫೆಬ್ರುವರಿ 6 ರಿಂದ ಅಕ್ರಮ ಎನಿಸಿಕೊಳ್ಳಲಿವೆ. ಜತೆಗೆ ಆ ಸಂಪರ್ಕಗಳು ಸ್ಥಗಿತಗೊಳ್ಳಲಿವೆ.
‘ಆಧಾರ್ ಆಧರಿತ ವಿದ್ಯುನ್ಮಾನ–ದೃಢೀಕರಣದ (ಇ–ಕೆವೈಸಿ: ಎಲೆಕ್ಟ್ರಾನಿಕ್–ನೋ ಯುವರ್ ಕಸ್ಟಮರ್) ಮೂಲಕ ಎಲ್ಲಾ ಮೊಬೈಲ್ ಸೇವಾ ಕಂಪೆನಿಗಳು ತಮ್ಮ ಚಂದಾದಾರರ ವಿವರಗಳನ್ನು ಮರುಪರಿಶೀಲನೆ ನಡೆಸಬೇಕು’ ಎಂದು ದೂರಸಂಪರ್ಕ ಸಚಿವಾಲಯ ಶುಕ್ರವಾರ ಹೊರಡಿಸಿರುವ ಅಧಿಸೂಚನೆಯಲ್ಲಿ ತಿಳಿಸಿದೆ.
2018ರ ಫೆಬ್ರುವರಿ 6ರ ಒಳಗೆ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು ಎಂದು ಅದು ಎಲ್ಲಾ ಕಂಪೆನಿಗಳಿಗೆ ಸೂಚನೆ ನೀಡಿದೆ. ‘ಆಧಾರ್ ಆಧರಿತ ಮರುಪರಿಶೀಲನೆ ಪ್ರಕ್ರಿಯೆ ಹೇಗೆ ನಡೆಯುತ್ತದೆ .ಎಂಬುದನ್ನು ಎಸ್ಎಂಎಸ್ ಕಳುಹಿಸುವ ಹಾಗೂ ಮಾಧ್ಯಮಗಳಲ್ಲಿ ಜಾಹೀರಾತು ನೀಡುವ ಮೂಲಕ ಮೊಬೈಲ್ ಸೇವಾ ಕಂಪೆನಿಗಳು ತಮ್ಮ ಗ್ರಾಹಕರಿಗೆ ಮುಂಚಿತವಾಗಿ ವಿವರಿಸಬೇಕು’ ಎಂದು ಅದು ಹೇಳಿದೆ.
‘ಈ ಪ್ರಕ್ರಿಯೆಯಲ್ಲಿ ವ್ಯತ್ಯಯವಾದರೆ ಕೋಟ್ಯಂತರ ಗ್ರಾಹಕರಿಗೆ ತೊಂದರೆ ಆಗಲಿದೆ. ಹೀಗಾಗಿ, ಇಡೀ ಪ್ರಕ್ರಿಯೆ ಸರಾಗವಾಗಿ ನಡೆಯಲು ಅನುಕೂಲವಾಗುವಂತೆ ಕಂಪೆನಿಗಳು ವ್ಯವಸ್ಥೆರೂಪಿಸಬೇಕು’ ಎಂದು ಸಚಿವಾಲಯ ನಿರ್ದೇಶನ ನೀಡಿದೆ.
‘ಇ–ಕೆವೈಸಿ ಪ್ರಕ್ರಿಯೆ ಆರಂಭಿಸುವುದಕ್ಕೂ ಮುನ್ನ ಕಂಪೆನಿಗಳು ಪ್ರತಿ ಚಂದಾದಾರರಿಗೂ ಪರಿಶೀಲನಾ ಸಂಖ್ಯೆ (ವೆರಿಫಿಕೇಷನ್ ಕೋಡ್) ಕಳುಹಿಸಿ, ಸಿಮ್ ಕಾರ್ಡ್ ಅವರ ಬಳಿಯೇ ಇದೆಯೇ ಎಂಬುದನ್ನು ದೃಢಪಡಿಸಿಕೊಳ್ಳಬೇಕು’ ಎಂದೂ ಅದು ಸೂಚಿಸಿದೆ.
-prajavani
loading...
No comments