ಕೈಗೆ ಕೈ ಕೊಟ್ಟು ಜೆಡಿಎಸ್ ತೆಕ್ಕೆಗೆ ಜಾರಿದ ಎಚ್.ವಿಶ್ವನಾಥ್ ?
ಮೈಸೂರು : ಮಾಜಿ ಸಂಸದ ಎಚ್.ವಿಶ್ವನಾಥ್ ಪಕ್ಷಕ್ಕೆ ಗುಡ್ಬೈ ಹೇಳಿ ಜೆಡಿಎಸ್ ಸೇರಲು ತೀರ್ಮಾನಿಸಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ . ಕುರುಬ ಸಮುದಾಯದ ಪ್ರಭಾವಿ ಮುಖಂಡರಾದ ವಿಶ್ವನಾಥ್ ಜೆಡಿಎಸ್ ತೆಕ್ಕೆಗೆ ಸೇರುತ್ತಿರುವುದು ಕೈ ಪಾಳೆಯದಲ್ಲಿ ಭಾರೀ ತಳಮಳಕ್ಕೆ ಕಾರಣವಾಗಿದೆ. ಪ್ರಮುಖವಾಗಿ ಹಳೇ ಮೈಸೂರು ಭಾಗ ಮತ್ತು ಉತ್ತರ ಕರ್ನಾಟಕ ಭಾಗಗಳಲ್ಲಿ ವಿಶ್ವನಾಥ್ ನಿರ್ಗಮನ ಕಾಂಗ್ರೆಸ್ಗೆ ದೊಡ್ಡ ಪೆಟ್ಟಾಗಿದೆ. ಹಿಂದುಳಿದ ವರ್ಗಗಳ ಹಾಗೂ ಶೋಷಿತ ವರ್ಗದ ಪರ ದನಿಯಾಗಿ ಕಳೆದ ನಾಲ್ಕು ದಶಕಗಳಿಂದ ಕಾಂಗ್ರೆಸ್ನಲ್ಲಿ ಸಕ್ರಿಯವಾಗಿ ತೊಡಗಿ ಹಲವಾರು ಪ್ರಮುಖ ಸ್ಥಾನಗಳಲ್ಲಿ ಗುರುತಿಸಿಕೊಂಡು ಪ್ರಸ್ತುತ ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್ಗೆ ಕರೆತರುವಲ್ಲೂ ಕೂಡ ವಿಶ್ವನಾಥ್ ಅವರು ಪ್ರಮುಖ ಪಾತ್ರ ವಹಿಸಿದ್ದರು ಎಂಬುದು ಈಗ ಇತಿಹಾಸ.
ಇದಲ್ಲದೆ ಕುರುಬ ಸಮುದಾಯವನ್ನು ಒಗ್ಗೂಡಿಸಿ ಕಾಗಿನೆಲೆ ಗುರುಪೀಠದ ಸ್ಥಾಪನೆಯಲ್ಲೂ ಇವರ ಪ್ರಮುಖ ಪಾತ್ರವಿತ್ತು. ಚಾಣಾಕ್ಷ ಮತ್ತು ಚತುರ ರಾಜಕಾರಣಿ ಎಂದೇ ಹೆಸರು ಮಾಡಿರುವ ವಿಶ್ವನಾಥ್ ಅವರ ಆಗಮನದಿಂದ ಮುಂಬರುವ ಚುನಾವಣೆಯಲ್ಲಿ ಜೆಡಿಎಸ್ ಸ್ವಂತ ಬಲದ ಮೇಲೆ ಸರ್ಕಾರ ರಚಿಸಿ ಕುಮಾರಸ್ವಾಮಿಯವರು ಮುಖ್ಯಮಂತ್ರಿ ಆಗುವ ಕನಸು ಈಗ ಮತ್ತೆ ಚಿಗುರೊಡೆದಂತಾಗಿದೆ. ಮುಂದಿನ ಚುನಾವಣೆ ನನ್ನ ಸಾರಥ್ಯದಲ್ಲೇ ನಡೆಯಲಿದೆ. ನಾನೇ ಮುಖ್ಯಮಂತ್ರಿ ಎಂದು ಹೇಳಿಕೆ ನೀಡುತ್ತಿದ್ದ ಸಿದ್ದರಾಮಯ್ಯನವರಿಗೆ ವಿಶ್ವನಾಥ್ ನಿರ್ಧಾರ ಬಿಗ್ ಷಾಕ್ ನೀಡಿದ್ದು , ಈಗ ಸಿದ್ದರಾಮಯ್ಯ ಅವರ ಮುಂದಿನ ನಡೆ ಏನು ಎಂಬುದು ಕುತೂಹಲದ ವಿಷಯವಾಗಿದೆ.
loading...
No comments