Breaking News

ಬಡವರ ಆರ್ಥಿಕ ಸಶಕ್ತತೆಗಾಗಿ ಪಶುಭಾಗ್ಯ ಯೋಜನೆ ಶಕುಂತಳಾ ಶೆಟ್ಟಿ



ಪುತ್ತೂರು : ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಅನ್ನಭಾಗ್ಯ, ಕ್ಷೀರ ಭಾಗ್ಯ, ಹಾಲಿಗೆ ಪ್ರೋತ್ಸಾಹಧನದ ಜೊತೆಗೆ ಇದೀಗ ಪಶುಭಾಗ್ಯ ಎಂಬ ಇನ್ನೊಂದು ಯೋಜನೆಯನ್ನು ರೂಪಿಸಿ ಬಡವರ ಆರ್ಥಿಕ ಸಶಕ್ತತೆಗಾಗಿ ಪ್ರೋತ್ಸಾಹ ನೀಡುತ್ತಿದ್ದಾರೆ ಎಂದು ಶಾಸಕಿ ಶಕುಂತಳಾ ಶೆಟ್ಟಿ ಹೇಳಿದರು.

ಅವರು ಗುರುವಾರ ತಾ.ಪಂ. ಸಭಾಂಗಣದಲ್ಲಿ ಪಶುಸಂಗೋಪನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖಾವತಿಯಿಂದ ರಾಜ್ಯ ಸರಕಾರದ ಯೋಜನೆಯಾದ ಪಶುಭಾಗ್ಯ ಮತ್ತು ರಾಜ್ಯ ವಲಯದಲ್ಲಿ ವಿಶೇಷ ಘಟಕದ ಗಿರಿಜನ ಉಪಯೋಜನೆಯ ಅಡಿಯಲ್ಲಿ  ಫಲಾನುಭವಿಗಳಿಗೆ ಸಹಾಯಧನದ ಆದೇಶ ಪತ್ರ ವಿತರಣೆ ಮಾಡಿ ಮಾತನಾಡಿದರು.

ಒಟ್ಟು ೮೬ ಮಂದಿಗೆ ಪಶುಭಾಗ್ಯ ಮತ್ತು ರಾಜ್ಯ ಘಟಕದಿಂದ ಪರಿಶಿಷ್ಟ ಜಾತಿಯವರಿಗೆ ೬, ಪರಿಶಿಷ್ಟ ಪಂಗಡದವರಿಗೆ ೪ ಸಹಾಯಧನದ ಆದೇಶ ಪತ್ರ ವಿತರಣೆ ಮಾಡಿದ ಶಾಸಕಿ ಅವರು ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯರವರು ಪ್ರಾರಂಭದಲ್ಲಿ ಅಕ್ಕಿಯನ್ನು ರೂ. ೧ ಗೆ ನೀಡಿದರು. ಬಳಿಕ ಉಚಿತ ಅಕ್ಕಿಯನ್ನು ವಿತರಿಸಿದರು. ಜೊತೆಗೆ ಕ್ಷೀರ ಭಾಗ್ಯ ನೀಡಿದರು. ಹಾಲು ಮಾರಾಟ ಮಾಡುವವರಿಗೆ ಪ್ರೋತ್ಸಾಹ ಧನ ಹೆಚ್ಚಿಸುವ ಮೂಲಕ ಭಾಗ್ಯಗಳ ಸರದಾರ ಎಣಿಸಿಕೊಂಡಿರುವ ಅವರು ಇದೀಗ ಪಶು ಭಾಗ್ಯ ಯೋಜನೆಯ ಮೂಲಕ ಸಾಮಾನ್ಯ ಬಡವರಿಗೂ ಸಹಾಯಧನದ ಮೂಲಕ ಪಶುಸಂಗೋಪನೆಗೆ ಆದ್ಯತೆ ನೀಡಿ. ಬಡವರು ತಮ್ಮ ಸ್ವಂತಿಕೆಯ ಜೀವನ ನಡೆಸುವಂತೆ ಪ್ರೋತ್ಸಾಹ ನೀಡಿದ್ದಾರೆ. ಹಸು ಖರೀದಿ ಮಾಡುವಲ್ಲಿ ಫಲಾನುಭವಿಗಳಿಗೆ ವರ್ಷದ ೩೬೫ ದಿನವೂ ಹಾಲು ಸಿಗಬೇಕೆನ್ನುವ ಉದ್ದೇಶದಿಂದ ವಿಶೇಷ ಯೋಜನೆ ನೀಡಿದ್ದಾರೆ ಎಂದರು.

loading...

No comments