Breaking News

ಕರ್ನಾಟಕ ಬಂದ್ಗೆ ನೀರಸ ಪ್ರತಿಕ್ರಿಯೆ



ಬೆಂಗಳೂರು:ಕನ್ನಡಪರ ಸಂಘಟನೆಗಳು ಇಂದು ಕರೆ ನೀಡಿದ್ದ “ಕರ್ನಾಟಕ ಬಂದ್”ಗೆ ಬಯಲು ಸೀಮೆ ಪ್ರದೇಶಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.  ಶಾಶ್ವತ ನೀರಾವರಿ ಯೋಜನೆ ಜಾರಿ, ರೈತರ ಸಾಲ ಮನ್ನಾ ಸೇರಿ ಹಲವು ಬೇಡಿಕೆಗಳ ಈಡೇರಿಕೆ ಆಗ್ರಹಿಸಿ  ಬಯಲು ಸೀಮೆ ಪ್ರದೇಶ, ನವಲಗುಂದ ನರಗುಂದ ಹೊರತುಪಡಿಸಿ ರಾಜ್ಯದ ಉಳಿದ ಕಡೆಗಳಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.

ರಾಜಧಾನಿ ಬೆಂಗಳೂರು ಸೇರಿದಂತೆ ಬಹುತೇಕ ರಾಜ್ಯದ ಜಿಲ್ಲೆಗಳಲ್ಲಿ ಜನಜೀವನ ಮತ್ತು ವಾಹನ ಸಂಚಾರ ಯಥಾ ಸ್ಥಿತಿಯಲ್ಲಿದ್ದು ಬಂದ್ ವಿಫಲವಾದರೆ ಕೋಲಾರ,ಚಿಕ್ಕಬಳ್ಳಾಪುರ,ತುಮಕೂರು ರಾಮನಗರದ ಕೆಲವು ಕಡೆಗಳಲ್ಲಿ ಬಲವಂತದಿಂದ ಅಂಗಡಿ ಮುಗ್ಗಟ್ಟು ಮುಚ್ಚಿಸಿರುವುದು,ರಸ್ತೆ ತಡೆ ಮಾಡಿ, ಟಯರ್‌ಗೆ ಬೆಂಕಿ ಹಚ್ಚಿದ್ದರೆ ಕೆಲವೆಡೆ ಬಸ್‌ಗಳ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ ಇಂತಹ ಸಣ್ಣಪುಟ್ಟ ಘಟನೆಗಳು ಹೊರತು ಪಡಿಸಿದರೆ  ಬಹುತೇಕ ಬಂದ್ ಶಾಂತಿಯುತವಾಗಿತ್ತು.

ಬಂದ್ ಕರೆ ಹಿನ್ನೆಲೆಯಲ್ಲಿ ಎಲ್ಲಾ ಕಡೆಗಳಲ್ಲೂ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಶಾಲಾ-ಕಾಲೇಜು, ಸರ್ಕಾರಿ ಕಚೇರಿಗಳು ಎಂದಿನಂತೆ ಕಾರ್ಯನಿರ್ವಹಿಸಿದರೆ ಬಸ್ ಆಟೋ ಇನ್ನಿತರ ವಾಹನಗಳ ಸಂಚಾರ ಎಂದಿನಂತಿತ್ತು ಬಯಲುಸೀಮೆ  ಪ್ರದೇಶಗಲ್ಲಿ ಮಂಜಾಗೃತ ಕ್ರಮವಾಗಿ ಪೊಲೀಸ್ ಭದ್ರತೆಯನ್ನು ಹೆಚ್ಚಿಸಿ ಪರಿಸ್ಥಿತಿಯ ಮೇಲೆ ನಿಗಾ ವಹಿಸಲಾಗಿತ್ತು.



ಅಲ್ಲದೆ ಕೋಲಾರ ಜಿಲ್ಲಾಧಿಕಾರಿ ಡಾ.ಕೆ.ವಿ. ತ್ರಿಲೋಕಚಂದ್ರ ಸರ್ಕಾರಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿದ್ದಾರೆ. ಮುಂಜಾಗೃತ ಕ್ರಮವಾಗಿ ಜಿಲ್ಲೆಯಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.



ಧಾರವಾಡ, ಗದಗ, ಬೆಳಗಾವಿ, ಬಾಗಲಕೋಟ, ಹಾವೇರಿ ಜಿಲ್ಲೆಗಳ ಪ್ರಮುಖ ನಗರಗಳಲ್ಲಿ ಮುಂಜಾನೆ ಕೆಲ ಹೊತ್ತು ಅಂಗಡಿ ಮುಂಗಟ್ಟುಗಳು, ಹೊಟೇಲ್‌ಗಳು ಮುಚ್ಚಿದ್ದವಾದರೂ ನಂತರ ನಿಧಾನವಾಗಿ ಅಲ್ಲಲ್ಲಿ ಬಾಗಿಲು ತೆರೆದು ಯಥಾಪ್ರಕಾರ ವಹಿವಾಟು ನಡೆಸಿದವು.

ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಮುಂಜಾಗ್ರತೆ ಕ್ರಮವಾಗಿ ಮುಂಜಾನೆಯಿಂದಲೇ ನಗರ ಸಾರಿಗೆ ಹಾಗೂ ಪರಊರುಗಳಿಗೆ ತೆರಳುವ ಬಸ್‌ಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು. ಇದರಿಂದ ಬಸ್ ನಿಲ್ದಾಣಗಳಲ್ಲಿ ಕಾಯ್ದು ನಿಂತಿದ್ದ ಪ್ರಯಾಣಿಕರು ಪರದಾಡುವ ಸ್ಥಿತಿ ಕಂಡುಬರುತ್ತಿತ್ತು.

ಹು.ಧಾ. ಮಹಾನಗರದಲ್ಲಿ ಶಾಲಾ ಕಾಲೇಜುಗಳಿಗೆ ಬಂದ್‌ನ ಬಿಸಿ ತಟ್ಟದೆ ಎಂದಿನಂತೆ ಆರಂಭವಾಗಿದ್ದವು. ಆದರೆ ಬಸ್ ಹಾಗೂ ಆಟೋಗಳಲ್ಲದೇ ವಿದ್ಯಾರ್ಥಿಗಳು ಸಾಕಷ್ಟು ಕಡೆಗಳಲ್ಲಿ ನಡೆದೇ ಹೋಗುತ್ತಿದ್ದುದು ಕಂಡುಬಂದಿತು. ಬಂದ್‌ಗೆ ಹಾವೇರಿ ಹಾಗೂ ಬೆಳಗಾವಿ ಜಿಲ್ಲೆಗಳಲ್ಲಿ ನೀರಸ ಪ್ರತಿಕ್ರಿಯೆ ದೊರಕಿದ್ದು ಬಸ್‌ಗಳು, ಆಟೋಗಳು ಹಾಗೂ ಖಾಸಗಿ ಬಸ್‌ಗಳ ಸಂಚಾರ ಎಂದಿನಂತೆಯೇ ನಡೆದಿತ್ತು.

ಅಂಗಡಿ, ಮಾರುಕಟ್ಟೆಗಳಲ್ಲಿ ಎಂದಿನಂತೆಯೇ ವ್ಯಾಪಾರ ನಡೆದಿತ್ತು. ಬಾಗಲಕೋಟ ಜಿಲ್ಲೆಯಲ್ಲಿ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ದೊರಕಲಿಲ್ಲವಾದರೂ ಬಾಗಲಕೋಟ ನಗರದಲ್ಲಿ ಮುಂಜಾನೆ ಪ್ರತಿಭಟನಾಕಾರರು ಒತ್ತಾಯಪೂರ್ವಕವಾಗಿ ಅಂಗಡಿ, ಹೊಟೇಲ್‌ಗಳನ್ನು ಬಾಗಿಲು ಮುಚ್ಚಿಸುತ್ತಿದ್ದು ಕಂಡುಬಂದಿತು.

ಇನ್ನು ದಕ್ಷಿಣ ಕನ್ನಡ, ಉಡುಪಿ ಮುಂತಾದ ಕರಾವಳಿ ಜಿಲ್ಲೆಗಳಲ್ಲಿ ಬಂದ್ ನಡೆಯಲಿಲ್ಲ. ಅಲ್ಲಿನ ಜನಜೀವನ ಎಂದಿನಂತಿತ್ತು. ಹಾಸನ, ತುಮಕೂರು, ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ ಜಿಲ್ಲೆಗಳಲ್ಲಿ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು 

No comments