Breaking News

ಪೂರ್ವ ಧ್ವೇಷ ಹಿನ್ನಲೆ ಒಬ್ಬನಿಗೆ ಚೂರಿ ಇರಿತ



ವಿಟ್ಲ : ಪೂರ್ವ ಧ್ವೇಷ ಹೊಂದಿದ್ದ ಮೂವರು ಯುವಕರು ಬೋಳಂತೂರು ಗ್ರಾಮದಲ್ಲಿ ಪರಸ್ಪರ ಬಡಿದಾಡಿಕೊಂಡ ಪರಿಣಾಮ ಇಬ್ಬರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಇಲ್ಲಿನ ಕಲ್ಪಣೆ ನಿವಾಸಿ ಇಬ್ರಾಹಿಂ ಪುತ್ರ ಮಹಮ್ಮದ್ ಉನೈಸ್ (22) ಎಂಬಾತ ಚೂರಿ ಇರಿತಕ್ಕೊಳಗಾಗಿ ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾನೆ. ಕೊಳ್ನಾಡು ಗ್ರಾಮದ ಸೆರ್ಕಳ ನಿವಾಸಿ ಅಬೂಬಕ್ಕರ್ ಪುತ್ರ ಅಬ್ದುಲ್ ಜಬ್ಬಾರ್ (29) ಮತ್ತು ಬೋಳಂತೂರು ಫಾರೂಕ್ ಎಂಬಿಬ್ಬರು ತನ್ನ ಮೇಲೆ ಹಲ್ಲೆ ನಡೆಸಿ ಚೂರಿಯಿಂದ ಇರಿದಿದ್ದಾರೆಂದು ದೂರು ನೀಡಿದ್ದಾನೆ. ಇದೇ ಸಂದರ್ಭ ಗಾಯಗೊಂಡ ಜಬ್ಬಾರ್ ಕೂಡಾ ತುಂಬೆ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು ಉನೈಸ್ ವಿರುದ್ಧ ಪ್ರತಿದೂರು ನೀಡಿದ್ದಾನೆ. ಶುಕ್ರವಾರ ರಾತ್ರಿ ಬೋಳಂತೂರು ಗ್ರಾಮದ ಬಂಗಾರಕೋಡಿ ಎಂಬಲ್ಲಿ ಉನೈಸ್ ಹೋಗುತ್ತಿದ್ದ ಸಂದರ್ಭ ಜಬ್ಬಾರ್ ಮತ್ತು ಫಾರೂಕ್ ಚೂರಿಯಿಂದ ಇರಿದಿದ್ದಾರೆಂದು ದೂರಿನಲ್ಲಿ ತಿಳಿಸಲಾಗಿದೆ. ವಿಟ್ಲ ಪೊಲೀಸರು ದೂರು-ಪ್ರತಿದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

No comments