Breaking News

ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಅಕ್ರಮ ತನಿಖೆಗೆ ಆದೇಶಿಸಿದ ಜಿಲ್ಲಾಡಳಿತ !


ಮೂಡುಬಿದ್ರೆ : ಕಳೆದ ಜುಲೈ 20 ರಂದು ಹಾಸ್ಟೆಲ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡ ಕಾವ್ಯ ಪ್ರಕರಣ ಇದೀಗ ಆಳ್ವಾಸ್ ಶಿಕ್ಷಣ ಸಂಸ್ಥೆಗೆ ಉರುಳಾಗಿ ಪರಿಣಮಿಸಿದೆ . ಕಾವ್ಯ ನಿಗೂಢ ಆತ್ಮಹತ್ಯೆ ನಡೆದ ಬಳಿಕ ಇದು ಆತ್ಮಹತ್ಯೆ ಅಲ್ಲ ಕೊಲೆ ಎಂದು ಅವರ ಹೆತ್ತವರು ಆರೋಪಿಸಿದರು ಈ ಆರೋಪ ಇಡೀ ರಾಜ್ಯದಾದ್ಯಂತ ಕಾಡ್ಗಿಚ್ಚಿನಂತೆ ಹಬ್ಬಿದ್ದು ವಿವಿಧ ಸಂಘನೆಗಳು ಕಾವ್ಯ ಸಾವಿಗೆ ನ್ಯಾಯ ದೊರಕಿಸಲು ಪ್ರತಿಭಟನೆ ಮಾಡುತ್ತಾ ಇದ್ದಾರೆ .

ಇತ್ತ ಪ್ರತಿಭಟನೆ ಕಾವು ಎರುತ್ತಿದಂತೆ ಶಿಕ್ಷಣ ಸಂಸ್ಥೆಯಲ್ಲಿ ಜುಲೈ 20 ರಂದು ನಡೆದ ಕಾವ್ಯಾ ಅಸಹಜ ಸಾವಿನ ವಿವಾದದ ಹಿನ್ನೆಲೆಯಲ್ಲಿ  ವಿಧಾನ ಪರಿಷತ್ ಸದಸ್ಯ ವಿ.ಎಸ್. ಉಗ್ರಪ್ಪ ನೇತೃತ್ವದ ಮಹಿಳಾ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆ ಸಮಿತಿ ಭೇಟಿ ನೀಡಿತ್ತು.

ಈ ವೇಳೆ ಆಳ್ವಾಸ್ ಶಿಕ್ಷಣ ಸಂಸ್ಥೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಸಮಿತಿ ಸಂಸ್ಥೆಯಲ್ಲಿ ಕಂಡುಬಂದಿರೋ ನ್ಯೂನ್ಯತೆಗಳ ಕುರಿತಾಗಿ ಜಿಲ್ಲಾಧಿಕಾರಿ ಉಪಸ್ಥಿತಿಯಲ್ಲಿದ್ದ ಸಭೆಯಲ್ಲಿ ಸಮಿತಿಯ ಅಧ್ಯಕ್ಷ ಉಗ್ರಪ್ಪ ಸಂಸ್ಥೆಯನ್ನು ಮತ್ತು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು.

ಪ್ರಮುಖವಾಗಿ ಆಳ್ವಾಸ್ ಶಿಕ್ಷಣ ಸಂಸ್ಥೆಯವರು ವಿದ್ಯಾಸಂಸ್ಥೆಯನ್ನು ನಡೆಸಲು ಅನುಮತಿ ಪಡೆದು ವಸತಿ ಶಾಲೆಯನ್ನು ಕಾನೂನು ಬಾಹಿರವಾಗಿ ನಡೆಸುತ್ತಿರುವುದರ ವಿರುದ್ಧ ಕ್ರಮಕ್ಕೆ ಕೋರಲಾಗಿತ್ತು. ಜೊತೆಗೆ ಕಟ್ಟಡ ನಿರ್ಮಾಣ ನಿಯಮಾವಳಿಗಳು ಹಾಗೂ ಅಗ್ನಿ ಸುರಕ್ಷತೆ ನಿಯಮಾವಳಿಗಳನ್ನೂ ಆಳ್ವಾಸ್ ಶಿಕ್ಷಣ ಸಂಸ್ಥೆ ಉಲ್ಲಂಘಿಸಿರುವುದರ ಬಗ್ಗೆಯೂ ಗಮನಸೆಳೆದಿತ್ತು.
ಈ ಎಲ್ಲ ವಿಚಾರಗಳನ್ನು ಗಂಭೀರವಾಗಿ ಪರಿಗಣಿಸಿರೋ ದ.ಕ ಜಿಲ್ಲಾಡಳಿತ ವಿವಿಧ ಇಲಾಖೆಗಳ ತಜ್ಞರನ್ನೊಳಗೊಂಡ ಸಮಿತಿಗಳನ್ನು ರಚಿಸಿದೆ. ಒಂದು ತಿಂಗಳೊಳಗಾಗಿ ತನಿಖೆ ನಡೆಸಿ ಕ್ರಮ ಕೈಗೊಂಡು ಅದರ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ಡಾ. ಕೆ.ಜಿ ಜಗದೀಶ್ ಸೂಚಿಸಿದ್ದಾರೆ.
ಆಳ್ವಾಸ್ ಸಂಸ್ಥೆಯ ಅಕ್ರಮಗಳ ಕುರಿತು ಜಿಲ್ಲಾಧಿಕಾರಿ ನೇತೃತ್ವದ ಸಮಿತಿ ರಚಿಸಿರುವುದು ಕಾವ್ಯಾ ಸಾವಿನ ಹಿನ್ನೆಲೆಯಲ್ಲಿ ನ್ಯಾಯಕ್ಕಾಗಿ ಆಗ್ರಹಿಸುತ್ತಿರುವವರ ಹೋರಾಟಕ್ಕೆ ಮೊದಲ ಜಯ ಎಂದು ಪರಿಗಣಿಸಲಾಗಿದೆ.







No comments