Breaking News

ಗುರ್ಮಿತ್ ರಾಮ್ ರಹೀಂ ಸಿಂಗ್ ಜೈಲಲ್ಲಿ ಏನು ಮಾಡುತ್ತಿದ್ದಾನೆ ಗೊತ್ತೇ ?



ರೋಹ್ಟಕ್ :  ಅತ್ಯಾಚಾರ ಪ್ರಕರಣದಲ್ಲಿ ೨೦ ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರುವ ಸ್ವಯಂಘೋಷಿತ ದೇವಮಾನವ ಗುರ್ಮಿತ್ ರಾಮ್ ರಹೀಂ ಸಿಂಗ್ ರಾತ್ರಿಯಿಡೀ ಜೈಲಿನಲ್ಲಿ ನಿದ್ದೆಯಿಲ್ಲದೆ ಜಾಗರಣೆ ಮಾಡಿದ್ದಾರೆ.

ಜೈಲು ಅಧಿಕಾರಿಗಳು ಅತ್ಯಾಚಾರಿ ದೇವಮಾನವನಿಗೆ ರಾತ್ರಿ ಊಟಕ್ಕೆ ೪ ರೊಟ್ಟಿ ನೀಡಿದರೆ, ಅರ್ಧ ರೊಟ್ಟಿಯನ್ನು ಮಾತ್ರ ತಿಂದು ಉಳಿದಿದ್ದನ್ನು ಹಾಗೆಯೇ ಬಿಟ್ಟಿದ್ದಾರೆ. ಜೈಲಿನಲ್ಲಿ ಕೆಲಸ ಮಾಡಲು ಅರ್ಜಿ ಭರ್ತಿ ಮಾಡಿದ ರಾಮ್ ರಹೀಂ ಸಿಂಗ್, ಜೈಲಿನಲ್ಲಿ ಮಾಲಿ ಕೆಲಸ ಇಲ್ಲವೇ ಫ್ಯಾಕ್ಟರಿಯಲ್ಲಿ ಕೆಲಸ ಕೊಡುವಂತೆ ಮನವಿ ಮಾಡಿದ್ದಾರೆ. ದಿನ ಒಂದಕ್ಕೆ ರಹೀಂ ಸಿಂಗ್‌ಗೆ ಜೈಲಿನಲ್ಲಿ ಮಾಡುವ ಕೆಲಸಕ್ಕೆ ೪೦ ರೂಪಾಯಿ ದಿನಗೂಲಿ ಸಿಗಲಿದೆ.

ರಾಮ್ ರಹೀಂ ಈಗ ಕೈದಿ ನಂ ೧೯೯೭. ಅತ್ಯಂತ ಹೆಚ್ಚು ಭದ್ರತೆಯುಳ್ಳ ರೋಹ್ಟಕ್ ಜೈಲಿನಲ್ಲಿ ಶಿಕ್ಷೆ ಅನುಭವಿಸಬೇಕಾಗಿರುವ ಬಾಬಾನಿಗೆ ಪೊಲೀಸರ ಜೊತೆಗೆ ಜೈಲಿನ ಸುತ್ತಲೂ ೨೩ ಅರೆ ಸೇನಾ ಮಿಲಿಟರಿ ಕಂಪನಿಗಳು ಕಾವಲು ಕಾಯುತ್ತಿವೆ. ಕಳೆದ ಶುಕ್ರವಾರದಂದು ಸಿಬಿಐ ಕೋರ್ಟ್ ನ್ಯಾಯಾಧೀಶರು ಡೇರಾ ಸಚ್ಚಾ ಸೌಧಾ ಸಂಸ್ಥೆಯ ಸ್ವಘೋಷಿತ ದೇವಮಾನವನ್ನು ಅತ್ಯಾಚಾರ ಅಪರಾಧಿ ಎಂದು ತೀರ್ಪು ನೀಡಿತ್ತು. ೧೫ ವರ್ಷಗಳ ಹಿಂದಿನ ಪ್ರಕರಣದಲ್ಲಿ ಬಾಬಾ ಶಿಕ್ಷೆ ಅನುಭವಿಸಬೇಕಿದೆ.

ಮೇಲ್ಮನವಿಗೆ ನಿರ್ಧಾರ: ಶಿಕ್ಷೆ ಪ್ರಮಾಣವನ್ನು ಅಮಾನತಿನಲ್ಲಿಟ್ಟು ಜಾಮೀನು ನೀಡಬೇಕೆಂದು ಹೈಕೋರ್ಟ್‌ಗೆ ಮನವಿ ಸಲ್ಲಿಸುವುದಾಗಿ ಬಾಬಾ ಪರ ವಕೀಲರು ಹೇಳಿದ್ದಾರೆ. ಇನ್ನೊಂದೆಡೆ, ಬಾಬಾಗೆ ಜೀವಾವಧಿ ಶಿಕ್ಷೆಗೆ ಕೋರಿ ಮೇಲ್ಮನವಿ ಸಲ್ಲಿಸುವುದಾಗಿ ಸಂತ್ರಸ್ತರು ಹೇಳಿದ್ದಾರೆ.

 ಶಿಕ್ಷೆ ಪ್ರಕಟವಾದ ಕೂಡಲೇ ಹರಿಯಾಣ ಸಿಎಂ ಮನೋಹರ್ ಲಾಲ್ ಖಟ್ಟರ್ ಅವರು ಉನ್ನತ ಮಟ್ಟದ ಅಧಿಕಾರಿಗಳು ಹಾಗೂ ಡಿಜಿಪಿ ಜತೆ ತುರ್ತು ಸಭೆ ನಡೆಸಿ, ಪರಿಸ್ಥಿತಿ ಬಗ್ಗೆ ಚರ್ಚಿಸಿದ್ದಾರೆ. ಶಿಕ್ಷೆ ಘೋಷಣೆ ನಂತರ ಯಾವುದೇ ಅಹಿತಕರ ಘಟನೆ ನಡೆದಿಲ್ಲ’ ಎಂದು ಹರ್ಯಾಣ ಸರ್ಕಾರ ತಿಳಿಸಿದೆ.

ಡೇರಾದ ಎಲ್ಲ ಖಾತೆಗಳನ್ನೂ ಮುಟ್ಟುಗೋಲು ಹಾಕಿ, ಹಿಂಸಾಚಾರದಿಂದ ನಷ್ಟ ಅನುಭವಿಸಿದವರಿಗೆ ಪರಿಹಾರ ನೀಡಲು ನಿರ್ಧರಿಸಲಾಗಿದೆ.



loading...

No comments